ಸಾರಿಗೆ ನೌಕರರ ಮುಷ್ಕರ! 2021
ಜೈಲು ಸೇರಿದವರೆಷ್ಟು? ಕೆಲಸ ಕಳೆದುಕೊಂಡವರೆಷ್ಟು? ಅಮಾನತ್ತು ಆದವರೆಷ್ಟು? ವರ್ಗಾವಣೆ ಆದವರೆಷ್ಟು ? ಸತ್ತವರು ಎಷ್ಟು ? ನೌಕರರ ಮೇಲೆ FIR ದಾಖಲಾದವರು ಎಷ್ಟು ?
*ಚೋಳರಾಜ್, ಬಳ್ಳಾರಿ.*
ತಮ್ಮ ಪ್ರಚಾರಕ್ಕೆ ಸಾರಿಗೆ ನೌಕರರನ್ನು ಬಳಸಿಕೊಂಡ್ರ ಕೋಡಿಹಳ್ಳಿ ಚಂದ್ರಶೇಖರ್ ?
ಮುಷ್ಕರ ಅಂತ್ಯದಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ರು, ಆದ್ರೆ ನೌಕರರ ಸ್ಥಿತಿ ಏನಾಯ್ತು?
ಕರ್ನಾಟಕದಲ್ಲಿ 2,941 ಸಾರಿಗೆ ನೌಕರರನ್ನು ಅಮಾನತ್ತು ಮಾಡಲಾಗಿದೆ ಹಾಗೂ 2,169 ಸಾರಿಗೆ ನೌಕರರನ್ನು ವಜಾಗೊಳಿಸಲಾಗಿದೆ. 7646 ನೌಕರರಿಗೆ ಶೋಕಾಸ್ ನೋಟಿಸ್ ನೀಡಿದೆ. 8000 ಕ್ಕೂ ಹೆಚ್ಚು ನೌಕರರನ್ನು ದೂರದ ಘಟಕಗಳಿಗೆ ಅವೈಜ್ಞಾನಿಕವಾಗಿ ವರ್ಗಾವಣೆ ಮಾಡಲಾಗಿದೆ. ಎಷ್ಟೋ ಯುವಕರು ತಮ್ಮ ಟ್ರೈನಿಂಗ್ ಅವದಿಯಲ್ಲಿಯೇ ಉದ್ಯೋಗವನ್ನು ಕಳೆದು ಕೊಂಡರು.
ಎಷ್ಟೋ ನೌಕರರ ಮೇಲೆ FIR ಆಯ್ತು, 59 ವರ್ಷದ ಚಾಲಕ, ಬಸ್ ಚಾಲನೆ ಮಾಡುತ್ತಲೇ ಕೊನೆಯುಸಿರೆಳೆದರು.
ಕೋಡಿಹಳ್ಳಿ ಚಂದ್ರಶೇಖರ್ ರವರೇ ಈ ನಿಮ್ಮ ಮಾತಿಗೆ ಬೆಲೆ ಕೊಟ್ಟು ಮುಷ್ಕರ ಮಾಡಿದ ಈ ಕಾರ್ಮಿಕ ಕುಟುಂಬಗಳಿಗೆ ನೀವು ಹೇಗೆ ಆರ್ಥಿಕ ಭದ್ರತೆ ನೀಡುತ್ತೀರಿ?
ಸಮಯ ಬಂದಾಗ ಹೆಗಲ ಮೇಲೆ ಹಸಿರು ಶಾಲು, ನಿಮ್ಮ ಸಮಯ ಕೆಟ್ಟಾಗ ಸಾರಿಗೆ ನೌಕರರೇ ಬೇಕಿತ್ತಾ ನಿಮಗೆ ನಿಮ್ಮಅಸ್ತಿತ್ವ ಉಳಿಸಿಕೊಳ್ಳಲು ?
ಸಂಘಟನೇ ರಚನೆ ಮಾಡೀ ಆ ಸಂಘದ ಅಧ್ಯಕ್ಷ ಆಗೋದು ದೊಡ್ಡದಲ್ಲ. ನಿಮಗೆ ತಾಕತ್ತು ಇದ್ರೆ, 'S' ಮಾರ್ಕ್ ಹಾಗೂ "8" ಮಾರ್ಕ್ ಗಳ್ಲಲ್ಲಿ KSRTC ಬಸ್ ಅನ್ನು ಚಲಾಯಿಸಿ ಒಂದು ಡ್ರೈವರ್ ಹುದ್ದೆ ಪಡೆದು ನೋಡಿ, ಅದರ ಕಷ್ಟ ಎಷ್ಟು ಅಂತ ತಿಳಿಯುತ್ತೆ. ಒಬ್ಬ ಡ್ರೈವರ್ ಗೆ ಇರುವ ಕೌಶಲ್ಯ ನಿಮ್ಮಲ್ಲಿ ಇಲ್ಲವಲ್ಲ.
ಒಂದು ಸ್ಪಾನರ್ ಹಿಡಿದು ಪಂಕ್ಚರ್ ಆದ ಬಸ್ಸಿನ ಟೈರ್ ತಗೆದು ಅದನ್ನು ಫಿಕ್ಸ್ ಮಾಡಿ ನೋಡಿ! ಅವರ ಕಷ್ಟ ಏನು ಅಂತ ಅರ್ಥ ಆಗುತ್ತದೆ.
ಟಿಕೆಟ್ ಟಿಕೆಟ್ ಎಂದು ಬಸ್ಸಿನ ಆ ತುದಿಯಿಂದ ಈ ತುದಿಯವರೆಗೆ ತುಂಬು ಗರ್ಭಿಣಿ ಆಚೀಚೇ ಓಡಾಡೂತ್ತಾ, ತನ್ನ ದೇಹ ಹಾಗೂ ಆರೋಗ್ಯವನ್ನು ಲೆಕ್ಕಿಸದೇ ಸಂಸ್ಥೆಗೆ ದುಡಿಯಿತ್ತಿರುವ ಮಹಿಳಾ ಕಂಡಕ್ಟರ್ ಗಳ ಪರಿಸ್ಥಿತಿ ಯನ್ನು ಅರಿತುಕೊಳ್ಳಿ.
ಅನಾವಶ್ಯಕ ವಾಗಿ ಕೋವಿಡ್ ಸಮಯದಲ್ಲಿ ಮುಷ್ಕರಕ್ಕೆ ಕರೆ ಕೊಟ್ಟು ಸಾರಿಗೆ ನೌಕರರನ್ನು ಬೀದಿ ಪಾಲು ಮಾಡಿಬಿಟ್ಟಿರೀ ನೀವು.
ಕೆಲವೇ ದಿನಗಳ ಹಿಂದೆ ಖಾಸಗಿ ಶಾಲೆಯ ಶಿಕ್ಷಕರು, ತರಕಾರಿ ಮಾರಿ, ಹೋಟೆಲ್ ನಲ್ಲಿ ಕೆಲಸ ಮಾಡಿದ ಹಾಗೇ ಸಾರಿಗೆ ನೌಕರರನ್ನೂ ಕೂಡ ನೀವು ಇದೇ ದಾರಿಗೆ ತಂದು ಬಿಟ್ರಲ್ಲ ಮಿಸ್ಟರ್ ಕೋಡಿಹಳ್ಳಿ ಚಂದ್ರಶೇಖರ್.!
ಎಷ್ಟೋ ಯುವಕರ ಜೀವನ ಪ್ರಾರಂಭವಾಗುವ ಹೊಸ್ತಿಲಲ್ಲೇ ಅವರ ಕನಸನ್ನು ನುಚ್ಚು ನೂರು ಮಾಡಿಬಿಟ್ರಲ್ಲ ನೀವು.
ಪ್ರತಿದಿನ, ಒಂದೊಂದು ವಿಧವಾದ ಮುಷ್ಕರಕ್ಕೆ ನೀವು ಬಾರಿಸಿದ ತಾಳಕ್ಕೆ ಕುಣಿದ ನೌಕರರು, ನಿಮ್ಮನ್ನೇ ದೇವರು ಎಂದು ತಿಳಿದವರು. ಅವರ ಪಾಲಿಗೆ ನೀವು ದೆವ್ವ ಆಗ್ತಿರಿ ಅಂತ ಅವರು ಕೂಡ ನಿರೀಕ್ಷಿಸಿರಲಿಲ್ಲ.
ನೀವು ರಾಜ್ಯಮಟ್ಟದ ಅಧ್ಯಕ್ಷರು, ನಿಮ್ಮ ಬೇಳೆ ಬೇಯಿಸಲು ಕೇವಲ ಎಸ್, ಎಸ್, ಎಲ್, ಸಿ. ಹಾಗೂ ಪಿಯುಸಿ ಓದಿರುವ ನೌಕರರನ್ನು ನೀವು ಮುಂದಿಟ್ಟುಕೊಂಡು, ಅವರ ಜೀವ ಹಾಗೂ ಜೀವನದ ಜೊತೆ ಆಟ ಆಡಿದ್ದು ಸರಿನಾ ?
ಅಧ್ಯಕ್ಷರಾಗಿ ನೀವು !
* ಮುಷ್ಕರಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ಮಾಡಲಿಲ್ಲ!
* ಸಾರಿಗೆ ಸಚಿವರ ಜೊತೆ ಮಾತಾಡಲಿಲ್ಲ!
* ಸಾರಿಗೆ ನೌಕರರ ಸಮಸ್ಯೆ ಬಗೆ ಹರಿಯಲಿಲ್ಲ!
* ನಿಗಮ/ ಮಂಡಳಿ / ಸಂಸ್ಥೆಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದ್ದರೂ, ಅದೇ ವಿಚಾರನ್ನೂ ಪ್ರಮುಖ ವಿಷಯವಾಗಿ ಇಟ್ಟುಕೊಂಡು ನೀವು ಮುಷ್ಕರಕ್ಕೆ ಕರೆ ನೀಡಿದ್ರಿ. ಇದು ಸಾರಿಗೆ ನೌಕರರಿಗೆ ಪರೋಕ್ಷ ವಾಗಿ ಮಾಡಿದ ಮೋಸ ಅಲ್ಪ ಕೋಡಿಹಳ್ಳಿ!
* 6ನೇ ವೇತನ ಆಯೋಗ ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸುತ್ತದೆ ಎಂದು ನಿಮಗೆ ತಿಳಿದಿದ್ದರೂ, ಈಡೇರಿಸಲಾಗದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೀವು ನಿಮ್ಮ ಹೆಸರನಿಂದ ಮಾತ್ರ ಪ್ರತಿದಿನ ನೀವು ಮಾದ್ಯಮ ಗಳಲ್ಲಿ ಸದ್ದು ಮಾಡಿದ್ರಿ.
ನೀವು ನಿಜವಾಗಿಯು ಸಾರಿಗೆ ನೌಕರರ ಅಧ್ಯಕ್ಷರಾಗಿದ್ದರೇ ?
ನೀವು ಮೊದಲು ತಿಳಿಯಬೇಕಾದದ್ದು ಈ ಅಂಶಗಳನ್ನು.
1. ಬೆಂಗಳೂರಿನ ಹಾಗೂ ಇತರ ಜಿಲ್ಲೆಗಳ ಬಸ್ ಸ್ಟಾಂಡ್ ಪಕ್ಕದಲ್ಲಿನ ಪುಟ್ ಪಾತ್ ನಲ್ಲಿ ಇರುವ ಹೋಟೆಲ್ ಗಳಲ್ಲಿ ಸಾರಿಗೆ ನೌಕರರ ಊಟ, ಟೀ, ಟಿಫಿನ್.
ಅವುಗಳ ಶುದ್ಧತೆ, ನೈರ್ಮಲ್ಯತೆ ಯ ಬಗ್ಗೆ ನಿಮಗೆ ಹೇಳಬೇಕಿಲ್ಲ.
2. ಇಲ್ಲಿಯವರೆಗೆ ಅವರಿಗೆ ಶುದ್ದವಾದ ಕುಡಿಯುವ ನೀರಿನ ಸೌಲಭ್ಯ ನೀಡಿಲ್ಲ.
ಡ್ರೈವರ್ ಪಕ್ಕದ ಸೀಟಿನಲ್ಲಿ , ಒಂದು ಪ್ಲಾಸ್ಟಿಕ್ ಬಾಟಲಿಯ ಮೇಲೆ ಗೋಣಿ ಚೀಲದ ತುಂಡನ್ನು ಸುತ್ತಿ ಅದೇ ಬಾಟಲಿಯಲ್ಲಿನ ನೀರನ್ನು ತಂಪು ಮಾಡಿ ಕುಡಿಯಲು ವ್ಯವಸ್ಥೆ ಮಾಡಿಕೊಂಡಿರುತ್ತಾರೆ.
3. ಯಾವ ಊರಲ್ಲಿ ಬಸ್ ಹಾಲ್ಟಿಂಗ್ ಆಗುತ್ತೋ ಅದೇ ಅವರ ನಿದ್ದೆಯ ಸ್ಥಳ, ಬಸ್ಸಿನ ಸೀಟ್ ಗಳೇ ಅವರಿಗೆ ಮಲಗುವ ಬೆಡ್. ಅವರಿಗೆ ಅದ್ಯಾವ ಜಾತಿಯ ಸೊಳ್ಳೆ ಕಡಿಯುತ್ತೋ ಆ ದೇವರೇ ಬಲ್ಲ.
ನೈಟ್ ಹಾಲ್ಟ್ ಆಗುವ ಚಾಲಕ ಹಾಗೂ ನಿರ್ವಾಹಕರಿಗೆ ಒಂದೇ ಒಂದು ಸೊಳ್ಳೆ ಪರದೇಯನ್ನು ನೀಡುವ ಪದ್ದತಿ ಸಂಸ್ಥೆ ಯಲ್ಲಿಲ್ಲ.
ಕೇವಲ ಒಂದೇ ಒಂದು ರಾತ್ರಿ ಸಾರಿಗೆ ಬಸ್ ನಲ್ಲಿ ಮಲಗಿ ನೋಡಿ ನಂತರ ನಿಮ್ಮ ಅನುಭವ ಹಂಚಿಕೊಳ್ಳಿ ಮಿಸ್ಟರ್ ಕೋಡಿಹಳ್ಳಿ .
4. ಸಾರಿಗೆ ನೌಕರರು ಎಲ್ಲಿ ಸ್ನಾನ ಮಾಡುತ್ತಾರೆ, ಎಲ್ಲಿ ಬಟ್ಟೆ ಬದಲಿಸುತ್ತಾರೆ, ಅವರಿಗೆ ಶೌಚಾಲಯದ ವ್ಯವಸ್ಥೆ ಹೇಗಿದೆ ಎಂಬುದರ ಬಗ್ಗೆ ನಿಮಗೆ ಅರಿವಿದೆಯೇ?
ಅದರಲ್ಲೂ ಮಹಿಳಾ ನೌಕರರ ಸಮಸ್ಯೆ ನಿಮಗೆ ಅರಿವಿದೇಯೇ ?
4. KSRTC, KEB ಹಾಗೂ POLICE ಈ ಇಲಾಖೆಗಳಲ್ಲಿ FDA, SDA , ಹಾಗೂ ಇತರ ಹುದ್ದೆಗಳನ್ನು KPSC ಅಥವಾ ಸರ್ಕಾರದಿಂದ ನೇಮಕವಾಗಲ್ಲ. ಯಾಕೆಂದ್ರೆ ಈ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವವರ ಆಯಸ್ಸು ತುಂಬಾ ಕಡಿಮೆ.
ಈ ಮೂರು ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ FDA, SDA, ಹಾಗೂ ಇತರ ನೌಕರರು ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದುಕೊಂಡವರು.
5. 50 ವರ್ಷ ಪೂರೈಸಿದ ಸಾರಿಗೆ ನೌಕರರ ಅನುಭವ ಹಾಗೂ ದತ್ತಾಂಶವನ್ನು ನೋಡಿ, ಬಹುತೇಕರು ಹೃದಯ ಸಮಸ್ಯೆ, ಬ್ರೈನ್ ಸಮಸ್ಯೆ, ಪ್ಯಾರಲಿಸಿಸ್, ಕಿಡ್ನಿ ಸಮಸ್ಯೆ ಹಾಗೂ ಇತರ ತೀವ್ರ ತರಹದ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಇವುಗಳಿಗೆ ಕಾರಣಗಳನ್ನು ಪತ್ತೆಹಚ್ಚಲು ಪ್ರಯತ್ನಿಸಿ
6. ಸಾರಿಗೆ ಸಿಬ್ಬಂದಿ ಗಳ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಒಮ್ಮೆ ತಿಳಿದು ನೋಡಿ ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
7. Over Time ಎಂಬ ಹೆಸರಿನಲ್ಲಿ ಅವರನ್ನು ಹಗಲು ರಾತ್ರಿ ಎನ್ನದೇ ಎಷ್ಟರ ಮಟ್ಟಿಗೆ ಸಾರಿಗೆ ಸಂಸ್ಥೆ ದುಡಿಸಿಕೊಂಡಿದೆ ಹಾಗೂ ದುಡಿಸಿಕೊಳ್ಳುತ್ತಿದೆ ಎಂಬದನ್ನು ತಿಳಿದುಕೊಳ್ಳಿ.
8. ಪ್ರತಿ ವರ್ಷ ಸಾರಿಗೆ ಸಂಸ್ಥೆ ಇಷ್ಟು ಕೋಟಿ ಲಾಭ ಗಳಿಸಿದೆ, ಅಷ್ಟು ಕೋಟಿ ಲಾಭ ಗಳಿಸಿದೆ ಎಂಬ ಸುದ್ದಿಯನ್ನು ನೀಡಿದ್ದೀರಿ. ಆ ಲಾಭದಲ್ಲಿ ಸಾರಿಗೆ ನೌಕರರ ಮಕ್ಕಳಿಗಾಗಿಯೇ ಇರುವಂತಹ ಒಂದೇ ಒಂದು ಶಾಲೆ ಇಲ್ಲ.
ಪೊಲೀಸರ ಮಕ್ಕಳಿಗಾಗಿ ಅವರದೇ ಆದ ಪೊಲೀಸ್ ಪಬ್ಲಿಕ್ ಶಾಲೆಗಳು ಇವೆ.
9. ಸಾರಿಗೆ ನೌಕರರ ಮಕ್ಕಳಿಗಾಗಿ, ಒಂದು ಶಾಲೆ, ಸ್ವರ್ಧಾತ್ಮಕ ತರಬೇತಿ ಕೇಂದ್ರ, ನೌಕರರು ಹಾಗೂ ಅವರ ಕುಟುಂಬದವರಿಗೆ ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯವಿದೆ.
10. ರಾತ್ರಿ ಇಡೀ ನಿದ್ದೆ ಕೆಟ್ಟು ಡ್ರೈವಿಂಗ್ ಮಾಡುವ, ನಿದ್ದೆ ಬಂದರೂ ಮುಖದ ಮೇಲೆ ನೀರು ಸಿಡಿಸಿಕೊಂಡು ಮತ್ತೆ ಬಸ್ ಅನ್ನು ನಿಗಧಿತ ಸಮಯಕ್ಕೆ ಸರಿಯಾಗಿ ತಲುಪಿಸುವ ಅವರ ಕರ್ತವ್ಯ ನಿಷ್ಠೆ ನಿಮಗೆ ಹಾಗೂ ಸರ್ಕಾರಕ್ಕೆ ಏಕೆ ಅರ್ಥವಾಗುತ್ತಿಲ್ಲ.
ಇಷ್ಟೆಲ್ಲ ಮೂಲ ಸಮಸ್ಯೆ ಗಳಿದ್ರೂ ಅವೆಲ್ಲವನ್ನು ಬದಿಗೆ ಒತ್ತಿ,
ಸರ್ಕಾರದಿಂದ ಈಡೇರಿಸಲು ಆಗದೇ ಇರುವಂತಹ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟು ಮಾಡಬಾರದ ಸಮಸಯದಲ್ಲಿ ಮುಷ್ಕರ ಮಾಡಿ, ಸಾರ್ವಜನಿಕರರಿಗೆ ತೊಂದರೆ ಕೊಟ್ಡಿದ್ದಲ್ಲದೇ,
ನಿಮಗೆ ಸಹಕಾರ ನೀಡಿದ ತಪ್ಪಿಗೆ ಸಾರಿಗೆ ನೌಕರರು ತಮ್ಮ ಉದ್ಯೋಗಗಳನ್ನು ಕಳೆದು ಕೊಂಡು ಇಂದು ಬೀದಿ ಪಾಲಾಗುವ ಹಾಗೆ ಮಾಡಿದ್ದೀರಿ.
ನೀವು ಸಾರಿಗೆ ನೌಕರರ ನಿಜವಾದ ಹೋರಾಟಗಾರರೇ / ಅಧ್ಯಕ್ಷರೇ ಆಗಿದ್ದಲ್ಲಿ, ಸರ್ಕಾರದ ಮೂಲಕವಾಗಲೀ, ನ್ಯಾಯಲಯದ ಮೂಲಕವಾಗಲೀ ಸಾರಿಗೆ ಸಂಸ್ಥೆಯಿಂದ ಶಿಕ್ಷೆ ಅನುಭವಿಸುತ್ತಿರುವ (ಅಮಾನತ್ತು, ವಜಾ, ಶೋಕಾಸ್ ನೋಟಿಸ್, ಜೈಲು / ಕೇಸ್ / ಇತ್ಯಾದಿ) ಎಲ್ಲಾರನ್ನು ಆರೋಪ ಮುಕ್ತರನ್ನಾಗಿ ಮಾಡಿ, ಮೊದಲಿನಂತೆಯೇ ತಾವು ಇದ್ದ ಸ್ಥಳ / ಘಟಕಗಳಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಮಾಡಲು ಸರ್ಕಾರ / ನ್ಯಾಯಲಯದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
ಇಲ್ಲಇದ್ದಲ್ಲಿ , ಇದೇ ಸಾರಿಗೆ ನೌಕರರು ನಿಮ್ಮನ್ನು ನೋಡುವ ಸ್ಥಿತಿ ಹಾಗೂ ಮುಂಬರುವ ಮುಷ್ಕರಗಳಿಗೆ ನಿಮ್ಮ ಮಾತುಗಳಿಗೆ ಕಿಂಚಿತ್ತು ಬೆಲೆ ಇರುವುದಿಲ್ಲ.
ನಿಮ್ಮ ನಾಯಕತ್ವದ ಅಸ್ಥಿತ್ವ ಕುಗ್ಗುವುದರಲ್ಲಿ ಎರಡು ಮಾತಿಲ್ಲ.
ಚೋಳರಾಜ್, ಬಳ್ಳಾರಿ.